ಅಕ್ರಮವಾಗಿ ನಡೆಯುತ್ತಿರುವ ಶಾಲೆಗೆ ವಿದ್ಯಾರ್ಥಿಗಳನ್ನು ಸೇರಿಸಬಾರದು : ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್ ಪಾಷ ಮನವಿ

Udayavani News
0
ಬೆಂಗಳೂರು, ಮೇ, 28; ಸಾಮರ್ ಇಂಟರ್ನ್ಯಾಷನಲ್ ಇಸ್ಲಾಮಿಕ್ ಶಾಲೆಯ ಮಾನ್ಯತೆ ಮತ್ತು ಮಾನ್ಯತೆ ನವೀಕರಣ ರದ್ದು ಮಾಡುವಂತೆ ಶಿಕ್ಷಣ ಇಲಾಖೆಯ ತ್ರಿಸದಸ್ಯ ಸಮಿತಿ , ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕರು ಆಯುಕ್ತರಿಗೆ ಶಿಫಾರಸ್ಸು ಮಾಡಿದ್ದು, ಮುಂಬರುವ ಶೈಕ್ಷಣಿಕ ವರ್ಷಕ್ಕೆ ಪೋಷಕರು ತಮ್ಮ ಮಕ್ಕಳನ್ನು ಸದರಿ ಶಾಲೆಗೆ ಸೇರಿಸಬಾರದು ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್ ಪಾಷ ಮನವಿ ಮಾಡಿದ್ದಾರೆ.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಬಾಹಿರವಾಗಿ ಶಿಕ್ಷಣ ಸಂಸ್ಥೆ ನಡೆಯುತ್ತಿರುವ ಕುರಿತು ದಾಖಲೆ ಸಮೇತ ಹಲವು ದೂರುಗಳನ್ನು ಸಲ್ಲಿಸಲಾಗಿದೆ. ದೂರಿನನ್ವಯ ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕರ ಕಛೇರಿ, ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್ 7(ಎ) 39 ರನ್ವಯ ಶಾಲೆಗೆ ನೀಡಿರುವ ಮಾನ್ಯತೆ ಹಿಂಪಡೆಯಲು ಹಾಗೂ ನಿಯಮ-34ರ ಪ್ರಕಾರ ಈ ಶಾಲೆಗೆ ನೀಡಿರುವ ನೊಂದಣಿಯನ್ನು ರದ್ದುಪಡಿಸಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿದೆ.

 ಶಾಲೆ ಆರಂಭಕ್ಕೂ ಮುನ್ನ ಸೂಕ್ತ ಕ್ರಮ ತೆಗೆದುಕೊಳ್ಳವಂತೆ ಇದೇ ಮೇ 26 ರಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಅಕ್ರಮವಾಗಿ ನಡೆಯುತ್ತಿರುವ ಶಾಲೆಯಲ್ಲಿ ಯಾವುದೇ ಕಾರಣಕ್ಕೂ ಪ್ರವೇಶ ಪಡೆಯಬಾರದು ಎಂದು ಕಳಕಳಿಯಿಂದ ಮನವಿ ಮಾಡುತ್ತಿರುವುದಾಗಿ ಹೇಳಿದರು.

ಶಾಲೆಯ ಮಾನ್ಯತೆ ಮತ್ತು ಮಾನ್ಯತೆ ನವೀಕರಣ ರದ್ದುಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ, ಉಪನಿರ್ದೇಶಕರುಗಳನ್ನೊಳಗೊಂಡ ತ್ರಿಸದಸ್ಯ ಸಮಿತಿ ಸದಸ್ಯರು ಅಭಿಪ್ರಾಯ ನೀಡಿ ಮಾನ್ಯ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆಗೆ 26/5/2025 ರಂದು ಶಿಫಾರಸ್ಸು ಮಾಡಿರುತ್ತಾರೆ. ಈ ಶಾಲೆ ಜಾಗದಲ್ಲಿ ಅನುಮತಿ ಇಲ್ಲದೇ ಮದರಸ ಸಹ ನಡೆಯುತ್ತಿದೆ. ಈ ಶಾಲೆಗೆ ಮಕ್ಕಳನ್ನು ನೋಂದಾಯಿಸುವ ಪೋಷಕರು ತುಂಬಾ ಎಚ್ಚರಿಕೆಯಿಂದಿರಬೇಕು. ಮಕ್ಕಳ ಹಿತದೃಷ್ಟಿಯಿಂದ ಹಾಗೂ ಮಕ್ಕಳ ಮುಂದಿನ ಭವಿಷ್ಯದ ಸಲುವಾಗಿ ಅಕ್ರಮವಾಗಿ, ದಬ್ಬಾಳಿಕೆ, ದೌರ್ಜನ್ಯದಿಂದ ನಡೆಯುತ್ತಿರುವ ಶಾಲೆಯನ್ನು ತೆರವುಗೊಳಿಸಲು ಶಿಕ್ಷಣ ಇಲಾಖೆ ಆಯುಕ್ತರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. 

“ಜಾಮಿಯಾ ಮೊಹಮ್ಮದಿಯಾ ಮನ್ಸೂರ" ಎಂದು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡುತ್ತಿದ್ದು, ಸರ್ಕಾರದಿಂದ ಮಾನ್ಯತೆ ಮತ್ತು ಅನುಮತಿ ಪಡೆದಿರುವುದಾಗಿ ತಿಳಿಸಿದೆ. ಆದರೆ ಶಾಲೆಯ ಬಗ್ಗೆ ಇಲಾಖಾ ವಿಚಾರಣೆ ಹಂತದಲ್ಲಿ “ಜಾಮಿಯಾ ಮೊಹಮ್ಮದಿಯಾ ಮನ್ಸೂರ" ಎಂಬ ಸಂಸ್ಥೆ ನೋಂದಣಿಯಾಗಿಲ್ಲ ಎಂದು ಈ ಸಂಸ್ಥೆಯವರು ಲಿಖಿತವಾಗಿ ಇಲಾಖೆಗೆ ಮಾಹಿತಿ ನೀಡಿದೆ. ಮದರಸಗಳಿಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಕಾನೂನು ಬಾಹಿರವಾಗಿ 10 ಲಕ್ಷ ರೂ ಅನುದಾನ ಪಡೆದಿದ್ದು, ಈ ಮೂಲಕ ರಾಜ್ಯ ಸರ್ಕಾರವನ್ನೇ ವಂಚಿಸಿ ಅಕ್ರಮಗಳನ್ನು ನಡೆಸುತ್ತಿದೆ ಎಂದರು.

Post a Comment

0Comments

Post a Comment (0)