ರಾಯಚೂರು ಮೇ.: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಹೊರವಲಯದಲ್ಲಿ ರಾಯಚೂರು – ಲಿಂಗಸುಗೂರು ಮುಖ್ಯ ರಸ್ತೆಯ ಪಕ್ಕದಲ್ಲಿರುವ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಆದಿ ಬಸವೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಬುಧವಾರ ಸಡಗರ ಸಂಭ್ರಮದಿಂದ ಅದ್ಧೂರಯಾಗಿ ನಡೆಯಿತು.
ಪ್ರತಿ ವರ್ಷ ಬಸವ ಜಯಂತಿಯಂದು ನಡೆಯುವಂತೆ ಈ ವರ್ಷವೂ ಬಸವ ಜಯಂತಿ ದಿನವಾದ ಬುಧವಾರ ಬೆಳಗ್ಗೆಯಿಂದ ಆರಂಭವಾದ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಸಂಜೆ ರಥೋತ್ಸವದೊಂದಿಗೆ ಸಂಪನ್ನಗೊಂಡಿತು. ಜಾತ್ರಾ ಮಹೋತ್ಸವದ ವೇದಿಕೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಗಳು, ಗಣ್ಯರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನವಜೀವನಕ್ಕೆ ಕಾಲಿಟ್ಟ 19 ನವಜೋಡಿಗಳು:
ಶ್ರೀ ಆದಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುಮಾರು 19 ನವಜೋಡಿಗಳು ವಿವಿಧ ಮಠಗಳ ಶ್ರೀಗಳ ಆಶೀರ್ವಾದದೊಂದಿಗೆ ನವಜೀವನಕ್ಕೆ ಕಾಲಿಟ್ಟರು. ಶ್ರೀಗಳು ವರರಿಗೆ ತಾಳಿ ನೀಡಿ ವಧು - ವರರಿಗೆ ಶುಭ ಹಾರೈಸಿ, ಮಾಂಗಲ್ಯ ಕಾರ್ಯ ನೆರವೇರಿಸಿದರು.
ಸಸಿ ನೀಡಿ ಶುಭ ಹಾರೈಸಿದ ಶ್ರೀಗಳು, ಗಣ್ಯರು:
ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನವಜೀವನಕ್ಕೆ ಕಾಲಿಟ್ಟ ನವ ಜೋಡಿಗಳಿಗೆ ವಿವಿಧ ಮಠದ ಶ್ರೀಗಳು, ರಾಜಕೀಯ ನಾಯಕರು, ದೇವಸ್ಥಾನ ಸಮಿತಿಯ ಮುಖಂಡರು ಸಸಿಗಳನ್ನು ನೀಡಿ ಶುಭ ಹಾರೈಸಿದರು.
ಪ್ರಸಾದ ವ್ಯವಸ್ಥೆ:
ಜಾತ್ರೆಗೆ ಆಗಮಿಸುವ ಭಕ್ತರಿಗೆ ಪ್ರತಿ ವರ್ಷವೂ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಸಾದ ವ್ಯವಸ್ಥೆ ಏರ್ಪಾಡು ಮಾಡಲಾಗುತ್ತದೆ. ಅದರಂತೆಯೇ ಈ ವರ್ಷವೂ ದೇವಸ್ಥಾನದ ಆವರಣದಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಗೋದಿ ಹುಗ್ಗಿ, ಬದನೇಕಾಯಿ ಪಲ್ಯ, ಅನ್ನ, ಸಾಂಬಾರ್ ಸವಿದರು.
ರಥ ಎಳೆದು ಭಕ್ತಿ ಸಮರ್ಪಿಸಿದ ಭಕ್ತರು:
ಶ್ರೀ ಆದಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಸಂಜೆ ನಡೆದ ರಥೋತ್ಸವ ಕಾರ್ಯಕ್ರಮದಲ್ಲಿ ಜಾತ್ರೆಗೆ ಆಮಿಸಿದ ಭಕ್ತರು ರಥ ಎಳೆದು ಭಕ್ತಿ ಸಮರ್ಪಿಸಿದರು. ಇನ್ನೂ ಈ ವರ್ಷ ಶ್ರೀ ಆದಿ ಬಸವೇಶ್ವರ ರಥಕ್ಕೆ ಹಾಗೂ ಉಚ್ಚಯ್ಯಕ್ಕೆ ಮಾಡಲಾಗಿದ್ದ ಹೂವಿನ ಅಲಂಕಾರ ರಥೋತ್ಸವ ಕಾರ್ಯಕ್ರಮದ ಮೆರಗು ಹೆಚ್ಚಿಸಿದರೆ, ದೇವಸ್ಥಾನಕ್ಕೆ ಮಾಡಲಾಗಿದ್ದ ಲೈಟಿಂಗ್ ವ್ಯವಸ್ಥೆ ಜಾತ್ರಾ ಮಹೋತ್ಸವದ ಮೆರಗು ಹೆಚ್ಚಿಸಿತ್ತು.
ಸಂಜೆಯಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು:
ಶ್ರೀ ಆದಿ ಬಸವೇಶ್ವರ ಜಾತ್ರೆಯೂ ಗ್ರಾಮದಲ್ಲಿ ನಡೆಯುವ ಜಾತ್ರೆಗಳಲ್ಲಿ ವಿಶೇಷ ಜಾತ್ರೆಯಾಗಿದ್ದು, ಸಂಜೆಯಾಗುತ್ತಿದ್ದಂತೆ ರಥೋತ್ಸವ ಕಾರ್ಯಕ್ರಮದ ಸಮಯಕ್ಕೆ ಪಾಮನಕಲ್ಲೂರು, ಚಿಕ್ಕಹೆಸರೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ರಥೋತ್ಸವ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.
ಶ್ರೀ ಆದಿ ಬಸವೇಶ್ವರ ಜಾತ್ರಾ ಮಹೋತ್ಸವದ ವೇದಿಕೆ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಸುವರ್ಣಗಿರಿ ವಿರಕ್ತಮಠ ಯದ್ದಲದೊಡ್ಡಿ, ಪಾಮನಕಲ್ಲೂರು, ಕೊನಕೊಂಡ್ಲದ ಶ್ರೀ ಮ.ನಿ.ಪ್ರ ಮಹಾಲಿಂಗ ಮಹಾಸ್ವಾಮಿಗಳು, ಮಲ್ಲದಗುಡ್ಡದ ಶ್ರೀ ಮ.ನಿ.ಪ್ರ ಆರೂಢ ಅಯ್ಯಪ್ಪ ತಾತನವರು, ಶಕ್ತಿಪೀಠ ಇರಕಲ್ ಮಠದ ಶ್ರೀ ಪರಮಪೂಜ್ಯ ಬಸವ ಪ್ರಸಾದ ಶರಣರು, ಹುನಕುಂಟಿಯ ಶ್ರೀ ಪರಮಪೂಜ್ಯ ಶರಣಯ್ಯ ತಾತನವರು, ಪಾಮನಕಲ್ಲೂರು ಗ್ರಾಮದ ಒಳಬಳ್ಳಾರಿ ಚನ್ನಬಸವೇಶ್ವರ ಮಠದ ಶ್ರೀ ಮಲ್ಲಯ್ಯ ಸ್ವಾಮಿಯವರು ಸೇರಿದಂತೆ ಅನೇಕ ಜನ ಶ್ರೀಗಳು ವಹಿಸಿದ್ದರು.
ವೇದಿಕೆ ಕಾರ್ಯಕ್ರಮದಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸನಗೌಡ ತುರವಿಹಾಳ, ಮಸ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲರ ಪುತ್ರ ಪ್ರಸನ್ನ ಪಾಟೀಲ್, ತಾ.ಪಂ ಸದಸ್ಯ ಸಂತೋಷ ರಾಜಗುರು, ಗ್ರಾಮದ ಪ್ರಮುಖರಾದ ರವಿ ಜಹಗೀರದಾರ, ಪಾಮನಕಲ್ಲೂರು ಗ್ರಾ.ಪಂ ಪಿಡಿಒ ಕೃಷ್ಣ ಹುನಗುಂದ, ಗ್ರಾ.ಪಂ ಅಧ್ಯಕ್ಷೆಯ ಪತಿ ಹುಲುಗಪ್ಪ ಚಿಲ್ಕರಾಗಿ, ಗ್ರಾ.ಪಂ ಉಪಾಧ್ಯಕ್ಷ ಲಕ್ಷ್ಮಣ ನಾಯಕ ತುಪ್ಪದ್ದೂರು, ದೇವಸ್ಥಾನ ಸಮಿತಿಯ ಅಧ್ಯಕ್ಷ ಹನುಮಂತ ಶೇಳ್ಳಗಿ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಾಂತಮ್ಮ, ಪ್ರಮುಖರಾದ ಶ್ರೀಶೈಲಪ್ಪ ಪತ್ತಾರ ಸೇರಿದಂತೆ ದೇವಸ್ಥಾನ ಸಮತಿಯ ಸದಸ್ಯರು, ಗ್ರಾ.ಪಂ ಸದಸ್ಯರು, ಗ್ರಾಮದ ಯುವಕರು, ಪಾಮನಕಲ್ಲೂರು, ಚಿಕ್ಕ ಹೆಸರೂರು ಸೇರಿದಂತೆ ವಿವಿಧ ಗ್ರಾಮಗಳಿಂದ ಆಮಿಸಿದ್ದ ಭಕ್ತರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಅನೇಕರಿದ್ದರು.