ನಾಲತವಾಡ:ಸಮೀಪದ ಘಾಳಪೂಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ತಹಶೀಲ್ದಾರ್ ಬಲರಾಮ ಕಟ್ಟಿಮನಿ ದಿಢೀರ್ ಭೇಟಿ ನೀಡುವ ಮೂಲಕ ವಸತಿ ನಿಲಯದಲ್ಲಿ ಕೊಠಡಿಗಳ ಹಾಗೂ ಶೌಚಾಲಯಗಳ ಅಶುಚಿತ್ವ ಕಂಡು ಕೆಂಡಾಮಂಡರಾದ ಘಟನೆ ನಡೆಯಿತು.
ಕಳೆದ 2 ತಿಂಗಳ ಹಿಂದೆ ವಿದ್ಯಾರ್ಥಿನಿಗೆ ಯುವಕನೋರ್ವ ಬಲವಂತದ ತಾಳಿ ಕಟ್ಟಿದ್ದ ಪ್ರಕರಣ, ಅಗ್ನಿ ಅವಘಡದಂತೆ ಘಟನೆಗಳ ಹಿನ್ನಲೆ ಸದ್ಯ ಬಾರೀ ನಿಗಾಯಿಟ್ಟಿರುವ ಮೇಲಧಿಕಾರಿಗಳ ಆದೇಶದ ಹಿನ್ನಲೆಯಲ್ಲಿ ಭೇಟಿ ನೀಡಿದ ತಹಶೀಲ್ದಾರರು ವಿದ್ಯಾರ್ಥಿಗಳ ವಸತಿ ಕೊಠಡಿಗಳಲ್ಲಿ ಮಕ್ಕಳನ್ನು ಕರೆದು ವಿಚಾರಿಸಿದರು. ಮಕ್ಕಳೊಂದಿಗೆ ಶಾಲೆಯಲ್ಲಿ ಊಟ, ಸಿಹಿ ತಿಂಡಿಗಳು, ಚಿಕನ್ ಊಟ, ಬೆಳಿಗ್ಗೆ ಉಪಹಾರ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಬೆಡ್ಶಿಟ್, ಶೂಜ್ಗಳು ವಿತರಣೆಯಾಗದ ಕುರಿತು ಸಂಶಯ ವ್ಯಕ್ತಪಡಿಸಿದರು.
ಮೂಗು ಮುಚ್ಚಿಕೊಂಡ ಅಧಿಕಾರಿಗಳು: ಸುಸಜ್ಜಿತ ವಸತಿ ಶಾಲೆಯನ್ನು ಕಂಡ ಸಂತಸ ವ್ಯಕ್ತಪಡಿಸಿದ್ದ ತಹಶೀಲ್ದಾರರು ನಂತರ ಮಕ್ಕಳ ಶೌಚಾಲಯಗಳಲ್ಲಿ ಸ್ವಚ್ಛತೆಯ ಕೊರತೆ ಹಾಗೂ ಗಬ್ಬು ವಾಸನೆಯಿಂದ ಮೂಗು ಮುಚ್ಚಿಕೊಂಡು ಪ್ರಾಚಾರ್ಯರ ಹಾಗೂ ನಿಲಯ ಪಾಲಕರ ವಿರುದ್ಧ ರೇಗಿದರು. ತಕ್ಷಣವೇ ಶೌಚಾಲಯಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು, ಸಂಗ್ರಹಿಸಲಾದ ತರಕಾರಿಯಲ್ಲೂ ಗುಣಮಟ್ಟದ ಕೊರತೆ ಕಂಡು ಬಂದಿದೆ, ಗಂಡು ಮಕ್ಕಳಿಗೆ ಬೆಡ್ಶಿಟ್ ವಿತರಣೆ ಏಕೆ ಮಾಡಿಲ್ಲ, ಶೂಜ್ ವಿತರಣೆಯಾದರೂ ಎಲ್ಲೂ ಕಾಣುತ್ತಿಲ್ಲ ಕಾರಣ ನೀಡಿ ಎಂದು ಸ್ಥಳದಲ್ಲಿದ್ದ ನಿಲಯಪಾಲಕ ಬಾಲಚಂದ್ರ ಮೇಟಿ ಅವರಿಗೆ ಸೂಚಿಸಿದರು. ನಂತರ ಅಧಿಕಾರಿಗಳೊಂದಿಗೆ ಆಗಮಿಸಿದ್ದ ಕಂದಾಯ ನಿರೀಕ್ಷಕರಾದ ವಿ.ವಿ.ಅಂಬಿಗೇರ ಅವರಿಗೆ ನಿಲಯಪಾಲಕರಿಂದ ಸಮಸ್ಯೆಗಳ ಕುರಿತು ಕಾರಣ ಕೇಳಿ ಮಾಹಿತಿ ಸಂಗ್ರಹಿಸಿ ಎಂದು ಸೂಚಿಸಿದರು
ಪರಿಶೀಲನೆ ಮಾಡಲಾಗಿ ಬೆಡ್ಶಿಟ್ ವಿತರಣೆಯಾಗದ ಕುರಿತು ದಾಖಲೆ, ಶೌಚಾಲಯದಲ್ಲಿ ಸ್ವಚ್ಛತೆ ಕೊರತೆ, ತರಕಾರಿ ಗುಣಮಟ್ಟದ ಕೊರತೆ, ಸಿಹಿ ವಿತರಣೆಯಾಗಿಲ್ಲ ಎನ್ನುವ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದ್ದೆನೆ ಶೀಘ್ರವೇ ಮಾಹಿತಿ ಕೊಡುವಂತೆ ಕೇಳಿದ್ದೇನೆ ಇವೆಲ್ಲಾ ಅಂಶಗಳನ್ನು ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಗಮನಕ್ಕೆ ತರುತ್ತೆನೆ-ಬಲರಾಮ ಕಟ್ಟಿಮನಿ, ತಹಶೀಲ್ದಾರ ಮುದ್ದೇಬಿಹಾಳ.
ಒತ್ತಾಯ : ವಸತಿ ಶಾಲೆಗಳಲ್ಲಿ ಪೋಲೀಸ್ ಇಲಾಖೆಯ ಮೂಲಕ ಮಕ್ಕಳಿಗೆ ರಕ್ಷಣೆ, ದೈರ್ಯ ಹಾಗೂ ಕಾನೂನು ಅರಿವು ಮೂಡಿಸಬೇಕು ಮತ್ತು ಮೊರಾರ್ಜಿ ಶಾಲೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು ರಾತ್ರಿ ವೇಳೆ ಭದ್ರತಾ ರಕ್ಷಕರನ್ನು ನೇಮಿಸಬೇಕು, ಪಕ್ಕದ ನಾಲತವಾಡದ ಮೊರಾರ್ಜಿ ಶಾಲೆಯಲ್ಲಿ 11 ಜನ ಡಿ ದರ್ಜೆ ನೌಕರರಿದ್ದಾರೆ, ಬ್ರಹತ್ ಘಾಳಪೂಜಿ ವಸತಿ ಶಾಲೆಯಲ್ಲಿ 6 ಜನ ಇದ್ದಾರೆ ಇದನ್ನು ಸರಿಪಡಿಸಬೇಕು ಎಂದು ಅಧಿಕಾರಿಗಳ ಜೊತೆಯಲ್ಲಿದ್ದ ಜಿಲ್ಲಾ ದೌರ್ಜನ್ಯ ಸಮೀತಿಯ ಡಿಎಸ್ಎಸ್ ಮುಖಂಡ ಮಲ್ಲು ತಳವಾರ ಆಗ್ರಹಿಸಿದರು.ಈ ವೇಳೆ ಕಂದಾಯ ನಿರೀಕ್ಷಕರಾದ ವಿ.ವಿ.ಅಂಬಿಗೇರ ಇದ್ದರು.
ವರದಿ : ಶಿವು ರಾಠೋಡ ನಾಲತವಾಡ