ಇಂಡಿ ಕಾಲುವೆ ನವೀಕರಣ: ಬಿ‌ಜೆಪಿ ಪುಕ್ಕಟೆ ಪ್ರಚಾರ

Udayavani News
0
ವಿಜಯಪುರ: 'ಇಂಡಿ ಕಾಲುವೆ ನವೀಕರಣಕ್ಕೆ ಕೇಂದ್ರ ಜಲಶಕ್ತಿ ಸಚಿವಾಲಯದ ಪರಿಶೀಲನಾ ಸಮಿತಿ (ಸಿಡಬ್ಲ್ಯುಸಿ) ಒಪ್ಪಿಗೆ ನೀಡಿರುವುದಕ್ಕೆ ತಾವೇ ಕಾರಣ ಎಂದು ಸಂಸದ ರಮೇಶ ಜಿಗಜಿಣಗಿ ಮತ್ತು ಜಿಲ್ಲೆಯ ಬಿಜೆಪಿ ಮುಖಂಡರು ಪುಕ್ಕಟೆ ಪ್ರಚಾರಕ್ಕೆ ಇಳಿದುವುರು ಖಂಡನೀಯ' ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಇಂಡಿ ಕಾಲುವೆ ನವೀಕರಣಕ್ಕೆ ₹2,666 ಕೋಟಿ ಪ್ರಸ್ತಾವನೆಗೆ ಕೇಂದ್ರ ಜಲಶಕ್ತಿ ಸಚಿವಾಲಯದ ಪರಿಶೀಲನಾ ಸಮಿತಿ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ. ಆದರೆ, ಇದರ ಹಿಂದೆ ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಇದ್ದಾರೆಯೇ ಹೊರತು, ಸಂಸದ ರಮೇಶ ಜಿಗಜಿಣಗಿ ಅವರ ಶ್ರಮ ಇಲ್ಲ' ಎಂದರು.

'ಇಂಡಿ ಕಾಲುವೆ ನವೀಕರಣ ಮಾಡುವಂತೆ ಶಾಸಕರಾದ ಯಶವಂತ ರಾಯಗೌಡ ಪಾಟೀಲ, ಅಶೋಕ ಮನಗೂಳಿ, ವಿಠಲ ಕಟಕಧೋಂಡ ಅವರ ಮನವಿ ಮೇರೆಗೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಕೆ.ಬಿ.ಜಿ.ಎನ್.ಎಲ್. ಅಧಿಕಾರಿಗಳನ್ನು ಜಿಲ್ಲೆಗೆ ಕಳುಹಿಸಿ, ಪರಿಶೀಲಿಸಿ, ಸರ್ಕಾರಕ್ಕೆ ವರದಿ ತರಿಸಿಕೊಂಡಿದ್ದರು. ಬಳಿಕ ಅವರು ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಇಂಡಿ ಕಾಲುವೆ ದುರಸ್ತಿ ಮಾಡಲು ಬೇಡಿಕೆ ಸಲ್ಲಿಸಿದ್ದರು. ‌ಈ ಮನವಿ ಮೇರೆಗೆ ಇದೀಗ ಸಿಡಬ್ಲ್ಯುಸಿ ಸಭೆಯಲ್ಲಿ ಒಪ್ಪಿಗೆ ನೀಡಿ, ಡಿಪಿಆರ್ ಕಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ' ಎಂದು ತಿಳಿಸಿದರು.

'ಇಂಡಿ ಕಾಲುವೆ ನವೀಕರಣ ವಿಷಯದಲ್ಲಿ ಇದುವರೆಗೂ ಯಾವುದೇ ಪಾತ್ರ ವಹಿಸಿರದ ಸಂಸದರು ಸಿಡಬ್ಲ್ಯುಸಿ ಸಭೆ ನಿಗದಿಯಾಗುತ್ತಿರುವಂತೆ ರಂಗ ಪ್ರವೇಶ ಮಾಡಿದ್ದಾರೆ. ಯೋಜನೆ ಕಾರ್ಯಗತವಾಗುವ ಮುನ್ನವೇ ಪ್ರಚಾರಕ್ಕೆ ಮುಂದಾಗಿರುವುದು ಜಿಗಜಿಣಗಿ ಅವರಂತಹ ಮುತ್ಸದ್ದಿ ರಾಜಕಾರಣಿಗೆ ಶೋಭೆ ತರುವುದಿಲ್ಲ' ಎಂದರು.

'ಜಿಲ್ಲೆಯ ಕಾಂಗ್ರೆಸ್‌ ಶಾಸಕರ ಆರಂಭಿಕ ಪ್ರಯತ್ನವನ್ನು ಅಲ್ಲಗಳೆದು ತಾವೊಬ್ಬರೇ ಮಾಡಿರುವಂತೆ ಸಂಸದರು ಬಿಂಬಿಸುವುದು ಅವರ ವ್ಯಕ್ತಿತ್ವಕ್ಕೆ ಸರಿಹೊಂದುವುದಿಲ್ಲ, ಮೊದಲು ಕೆಲಸ ಮಾಡಿ, ಬಳಿಕ ಪ್ರಚಾರ ಮಾಡಿ, ಸುಳ್ಳು ಪ್ರಚಾರ ಮಾಡಬೇಡಿ' ಎಂದು ಮನವಿ ಮಾಡಿದರು.

'ಕಾಲುವೆ ನವೀಕರಣ ಸಂಬಂಧ ಡಿಪಿಆರ್ ಮಾಡಿ ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ಸಿಡಬ್ಲ್ಯುಸಿ ಹೇಳಿದೆ, ಇನ್ನೂ ಯಾವುದೇ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ, ಇದರ ಅನುಷ್ಠಾನಕ್ಕೆ ರಾಜ್ಯ ಸರ್ಕಾರವೂ ಹಣ ವಿನಿಯೋಗ ಮಾಡಬೇಕಾಗುತ್ತದೆ' ಎಂದರು.

'ಹೊನಗನಹಳ್ಳಿ ರೈಲ್ವೆ ಮೇಲ್ಸೇತುವೆ ಉದ್ಘಾಟನೆಯನ್ನು ಸಂಸದರು ತರಾತುರಿಯಲ್ಲಿ ಬಿಜೆಪಿ ಕಾರ್ಯಕ್ರಮದಂತೆ ಮಾಡಿದರು. ಅಧಿಕಾರಿಗಳು, ಸಚಿವರು, ಶಾಸಕರನ್ನು ಆಹ್ವಾನಿಸದೇ ಮಾಡಿರುವುದು ಸರಿಯಲ್ಲ' ಎಂದು ದೂರಿದರು.

ಕಾಂಗ್ರೆಸ್ ಮುಖಂಡರಾದ ನಾಗರಾಜ ಲಂಬು, ವಸಂತ ಹೊನಮೋಡೆ ಇದ್ದರು.

ಎಸ್‌.ಎಂ.ಪಾಟೀಲ ಗಣಿಹಾರ ಕೆಪಿಸಿಸಿ ವಕ್ತಾರಇಂಡಿ ಕಾಲುವೆ ನವೀಕರಣಕ್ಕೆ ₹2666 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರದಿಂದ ಕೊಡಿಸುವಲ್ಲಿ ಸಂಸದ ಜಿಗಜಿಣಗಿ ನೈಜ ಶ್ರಮವಹಿಸಿದ್ದರೇ ಅವರಿಗೆ ಜಿಲ್ಲೆಯ ಪರವಾಗಿ ಧನ್ಯವಾದ

Post a Comment

0Comments

Post a Comment (0)