ವಸತಿ ಶಾಲೆಗಳ ನೌಕರರ ಸಂಘದ ಉಳಿದ ಬೇಡಿಕೆಗಳನ್ನು ಬಜೆಟ್ ನಲ್ಲಿ ಈಡೇರಿಸಲು ಕ್ರಮ : ಸಚಿವ ಕೋಟಾ ಶ್ರೀನಿವಾಸ ಪೂಜಾರಿ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಬೆಂಗಳೂರು, ಫೆಬ್ರುವರಿ 10 : ವಸತಿ ಶಾಲೆಗಳ ನೌಕರರ ಸಂಘದ ಬಾಕಿ ಬೇಡಿಕೆಗಳನ್ನು ಮುಂಬರುವ ಬಜೆಟ್ ನಲ್ಲಿ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.  
ವಿಧಾನಸೌಧದ ಕಚೇರಿಯಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಿದ ಸಚಿವರನ್ನು ವಸತಿ ಶಾಲೆಗಳ ನೌಕರರ ಸಂಘದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸಂಘದ ಬೇಡಿಕೆಗಳನ್ನು ಈಡೇರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.  
ವಸತಿ ಶಾಲೆಗಳ ಬಹುದಿನಗಳ ಬೇಡಿಕೆಗಳಾದ ಗಣಕೀಕೃತ ಕೌನ್ಸಿಲಿಂಗ್ ಮೂಲಕ ವರ್ಗಾವಣೆ, ವಿವಿಧ ವೃಂದಗಳ ನೌಕರರಿಗೆ ಮುಂಬಡ್ತಿ ಮತ್ತು ಎನ್ ಪಿಎಸ್ ಯೋಜನೆಯ ಸರ್ಕಾರದ ವಂತಿಗೆಯನ್ನು ಶೇ.14 ಕ್ಕೆ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಸಮ್ಮುಖದಲ್ಲಿ ವಸತಿ ಶಾಲೆಗಳ ನೌಕರರ ಸಂಘದಿಂದ ಅಭಿನಂದನೆ ಸಲ್ಲಿಸಲಾಯಿತು.
ವಸತಿ ಶಾಲೆಗಳ ನೌಕರರ ಸಂಘ ರಾಜ್ಯಾಧ್ಯಕ್ಷ ಪಿ.ಎನ್. ರವಿಚಂದ್ರ. ಪ್ರಧಾನ ಕಾರ್ಯುದರ್ಶಿ ನಟರಾಜ್ ಪಿ.ಕೆ, ಉಪಾಧ್ಯಕ್ಷ ಲಕ್ಷ್ಮಿ ಶೆಟ್ಟಿ, ಸಹ ಕಾರ್ಯದರ್ಶಿ ದೀಪ ಎ. ಮುಂತಾದವರು ಉಪಸ್ಥಿತರಿದ್ದರು.

Post a Comment

Previous Post Next Post